ಬೆಂಗಳೂರು: ಎಸ್ಡಿಪಿಐಯಿಂದ ಪತ್ರಕರ್ತರ ಸ್ನೇಹ ಮಿಲನ
Wednesday, February 22nd, 2012
ಬೆಂಗಳೂರು: ರಾಜ್ಯದ್ಯಂತ ನಡೆಸಲುದ್ದೇಶಿಸಿರುವ ‘ಜನ ಪರ ರಾಜಕೀಯ ಸಮಾವೇಶ’ದ ಅಂಗವಾಗಿ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಬೆಂಗಳೂರು ಜಿಲ್ಲಾ ವತಿಯಿಂದ ಇಲ್ಲಿನ ಬೆನ್ಸನ್ ಟೌನ್ನಲ್ಲಿರುವ ಆ್ಯಡಮ್ಸ್ ಗೋಲ್ಡನ್ ಹೆರಿಟೇಜ್ನಲ್ಲಿ ಪತ್ರಕರ್ತರ ಸ್ನೇಹ ಮಿಲನ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಎಸ್ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹನ್ನಾನ್ ಮಾತನಾಡಿ, ಎಸ್ಡಿಪಿಐ ಒಂದು ನೂತನವಾಗಿ ಸ್ಥಾಪಿಸಲ್ಪಟ್ಟ ಪಕ್ಷವಾಗಿರಬಹುದು. ಆದರೆ ಕಳೆದ ಹದಿನೈದು ವರ್ಷಗಳ ಕಾಲ ಜನರೊಂದಿಗೆ ಬೆರೆತು, ಅವರ ಸಮಸ್ಯೆಗಳು ಹಾಗೂ ಸವಾಲುಗಳನ್ನು ಅರಿತು ಅದನ್ನು ಪರಿಹರಿಸುವುದಕ್ಕಾಗಿ ಸಮಾನ ಮನಸ್ಕ ವ್ಯಕ್ತಿಗಳು ಸೇರಿ ಸ್ಥಾಪಿಸಿದ ಪಕ್ಷವಾಗಿದೆ ಎಸ್ಡಿಪಿಐ. ಪಕ್ಷವು ದೇಶಾದ್ಯಂತ ಹಲವು ಸಾಮಾಜಿಕ ಕಾರ್ಯಗಳನ್ನು ನಡೆಸುತ್ತಿದೆ ಮತ್ತು ಹಲವು ಸಮಾನ ಮನಸ್ಕ ಪಕ್ಷಗಳೊಂದಿಗೆ ಮತ್ತು ಸಂಘಟನೆಗಳೊಂದಿಗೆ ಕಾರ್ಯ ನಿರ್ವಹಿಸುತ್ತಿದೆ ಎಂದರು.
ದೇಶಕ್ಕೆ ಸ್ವಾತಂತ್ರವು ಲಭಿಸಿದಂದಿನಿಂದ ಜನರನ್ನು ರಾಜಕೀಯವಾಗಿ ಜಾಗೃತಿಗೊಳಿಸಲು ಹಲವು ವೈಯಕ್ತಿಕ ಪ್ರಯತ್ನಗಳು ನಡೆದಿವೆ. ಆದರೆ ಇದುವರೆಗೆ ಈ ವಿಷಯದಲ್ಲಿ ಯಾವುದೇ ಸಂಘಟಿತ ಪ್ರಯತ್ನವು ನಡೆದಿಲ್ಲ. ದೇಶ ವಿಭಜನೆಯ ವೇಳೆ ಸಮಾಜಕ್ಕೆ ಒಳಿತಾಗಿರಬೇಕಾಗಿದ್ದ ಹಲವು ಶಿಕ್ಷಣವಂತ ಅಲ್ಪಸಂಖ್ಯಾತ ಯುವಕರು ನೆರೆಯ ರಾಷ್ಟ್ರಗಳಿಗೆ ಹೊರಟು ಹೋದರು. ಇನ್ನುಳಿದ ಅಲ್ಪಸಂಖ್ಯಾತರೆಂದರೆ ಕಾರ್ಮಿಕ ವರ್ಗವನ್ನೊಳಗೊಂಡ ದುರ್ಬಲ ವರ್ಗದವರಾಗಿದ್ದರು. ಈ ಜನರು ಇಲ್ಲೇ ಹುಟ್ಟಿದವರಾಗಿದ್ದರು ಮತ್ತು ತಮ್ಮ ಜೀವನ ಹಾಗೂ ಮರಣ ಎರಡೂ ಇಲ್ಲೇ ಆಗಿರುತ್ತದೆಂಬ ತೀರ್ಮಾನವನ್ನು ತೆಗೆದುಕೊಂಡವರಾಗಿದ್ದರು ಎಂದರು.
ಈ ಜನರೊಂದಿಗಿದ್ದ ಆಶಾಕಿರಣವೆಂದರೆ ಡಾ.ಬಿ.ಆರ್.ಅಂಬೇಡ್ಕರ್ರವರು ಬರೆದ ಭಾರತದ ಸಂವಿಧಾನವಾಗಿತ್ತು. ನ್ಯಾಯ ಮತ್ತು ಶಾಂತಿಯ ಭರವಸೆಯೊಂದಿಗೆ ಕಳೆದ 64 ವರ್ಷಗಳ ಕಾಲ ಅವರು ಕಾದರು ಮತ್ತು ಇದವರೆಗೆ ನ್ಯಾಯ ವಂಚಿತರಾಗಿಯೇ ಉಳಿದರು. ಭಾರತದ ಜನಸಂಖ್ಯೆಯ 40%ಕ್ಕೂ ಅಧಿಕ ಜನಸಂಖ್ಯೆ ಬಡತನ ರೇಖೆಗಿಂತ ಕೆಳಗೆ ಜೀವಿಸುತ್ತಿದೆ ಎಂಬುದು ವಾಸ್ತವವಾಗಿದೆ ಎಂದು ಹನ್ನಾನ್ ಹೇಳಿದರು.
ಮಾಧ್ಯಮವು ಪ್ರಜಾಪ್ರಭುತ್ವದ ನಾಲ್ಕನೆ ಅಂಗವಾಗಿದೆ. ಮಾಧ್ಯಮಗಳು ಜನರಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿವು ಮೂಡಿಸಬೇಕು ಮತ್ತು ಜನರ ಮೇಲೆ ದೌರ್ಜನ್ಯವೆಸಗುವವರನ್ನು ಬೆಳಕಿಗೆ ತರಬೇಕು ಎಂದು ಅವರು ಕರೆಯಿತ್ತರು.
ಕಾರ್ಯಕ್ರಮದಲ್ಲಿ ಪಕ್ಷದ ಇತರ ನಾಯಕರು ಉಪಸ್ಥಿತರಿದ್ದರು.
A neo social movement for a new India of equal rights to all Indians


















































